ಅನುದಿನದ ಮನ್ನಾ
2
1
123
ಸಣ್ಣ ಬೀಜದಿಂದ ಎತ್ತರದ ಮರದವರೆಗೆ
Tuesday, 14th of October 2025
Categories :
ಬೀಜದಲ್ಲಿರುವ ಶಕ್ತಿ ( power of the Seed)
"ಆತನು ಹೇಳಿದ್ದೇನಂದರೆ - ದೇವರ ರಾಜ್ಯವು ಯಾವದಕ್ಕೆ ಹೋಲಿಕೆಯಾಗಿದೆ? ಅದನ್ನು ನಾನು ಯಾವದಕ್ಕೆ ಹೋಲಿಸಲಿ? ಅದು ಸಾಸಿವೆಕಾಳಿಗೆ ಹೋಲಿಕೆಯಾಗಿದೆ. ಒಬ್ಬ ಮನುಷ್ಯನು ಅದನ್ನು ತೆಗೆದುಕೊಂಡುಹೋಗಿ ತನ್ನ ತೋಟದಲ್ಲಿ ಹಾಕಿದನು; ಅದು ಬೆಳೆದು ಮರವಾಯಿತು; ಮತ್ತು ಆಕಾಶದಲ್ಲಿ ಹಾರಾಡುವ ಪಕ್ಷಿಗಳು ಅದರ ಕೊಂಬೆಗಳಲ್ಲಿ ವಾಸಮಾಡಿದವು ಅಂದನು." (ಲೂಕ 13:18-19)
ಕೆಲವೊಮ್ಮೆ, ನಾವು ಸಣ್ಣ ಕ್ರಿಯೆಗಳು, ಸಣ್ಣ ನಿರ್ಧಾರಗಳು ಮತ್ತು ಹೌದು, ಸಣ್ಣ ಬೀಜಗಳ ಶಕ್ತಿಯನ್ನು ಕಡಿಮೆಯಾಗಿ ಅಂದಾಜು ಮಾಡುತ್ತೇವೆ. ದೇವರ ರಾಜ್ಯದ ಫಲವತ್ತಾದ ಮಣ್ಣಿನಲ್ಲಿ ನೆಟ್ಟಾಗ ಯಾವುದೇ ಬೀಜವು ತುಂಬಾ ಚಿಕ್ಕದಲ್ಲ ಎಂದು ಅರ್ಥಮಾಡಿಕೊಂಡು, ಉದ್ದೇಶಪೂರ್ವಕವಾಗಿ "ನಮ್ಮ ಬೀಜಗಳನ್ನು ಬಿತ್ತುವುದನ್ನು" ನಾವು ಆರಿಸಿಕೊಳ್ಳುವಾಗ ಅದ್ಭುತ ಬೆಳವಣಿಗೆ ಸಂಭವಿಸುತ್ತದೆ ಎಂದು ನಾನು ನಂಬುತ್ತೇನೆ.
ಪುರಾತತ್ತ್ವಜ್ಞರು ಇತ್ತೀಚೆಗೆ ಒಂದು ಪ್ರಾಚೀನ ಪಿರಮಿಡ್ ಅನ್ನು ತೆರೆದರು, ಸಾವಿರಾರು ವರ್ಷಗಳಷ್ಟು ಹಳೆಯದಾದ, ಇನ್ನೂ ಸಂರಕ್ಷಿಸಲ್ಪಟ್ಟ ಆದರೆ ಬಳಸದ ಬೀಜಗಳನ್ನು ಕಂಡುಕೊಂಡರು. ಈ ಬೀಜಗಳು ಜೀವಕ್ಕೆ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿದ್ದವು, ಆದರೆ ಅವು ಎಂದಿಗೂ ನೆಡದ ಕಾರಣ ಅವು ಜಡವಾಗಿಯೇ ಉಳಿದಿದ್ದವು.
"ಆದ್ದರಿಂದ ನಂಬಿಕೆಯು ಕ್ರಿಯೆಗಳಲ್ಲಿ ಪ್ರಕಟವಾಗದಿದ್ದರೆ ಅದು ಸತ್ತದ್ದೆ." (ಯಾಕೋಬ 2:17)ಎಂದು ದೇವರವಾಕ್ಯ ಹೇಳುತ್ತದೆ. ಒಳ್ಳೆಯ ಉದ್ದೇಶಗಳು ಆ ಬೀಜಗಳಂತೆಯೇ - ಸಾಮರ್ಥ್ಯದಿಂದ ತುಂಬಿರುತ್ತವೆ ಆದರೆ ಅದು ಕಾರ್ಯದಲ್ಲಿ ನಿರ್ವಹಿಸದೇ ಹೋದರೆ ನಿಷ್ಪ್ರಯೋಜಕವಾದದ್ದು. ಅದು ನೀವು ಯಾವಾಗಲೂ ಬೆಂಬಲಿಸಲು ಬಯಸುವ ಸ್ನೇಹಿತರಿಗಾಗಿ ಮಾಡಬೇಕಾಗಿದ್ದ ಪ್ರಾರ್ಥನೆಯಾಗಿರಲಿ, ಎಂದಿಗೂ ಮಾಡದ ಕರ್ತನ ಕೆಲಸವಾಗಲಿ ಅಥವಾ ನೀವು ಸುಪ್ತವಾಗಿಟ್ಟಿರುವ ಆತ್ಮೀಕ ವರಗಳಾಗಲೀ, ಅವುಗಳನ್ನು ಕೊಯ್ಲು ಮಾಡಬೇಕೆಂದರೆ ನಿಮ್ಮ ಉದ್ದೇಶಗಳನ್ನು ನೀವು ಬಿತ್ತಬೇಕಾಗುತ್ತದೆ.
ಯಾವುದೇ ಬೀಜವು ತುಂಬಾ ಸಣ್ಣ ಮಟ್ಟದ್ದಲ್ಲ:
ಅರ್ಥಪೂರ್ಣ ಪರಿಣಾಮ ಬೀರಲು ನಾವು ಆಗಾಗ್ಗೆ ದೊಡ್ಡದನ್ನು ಮಾಡಬೇಕೆಂದು ಭಾವಿಸುತ್ತೇವೆ. ಆದರೂ, ದೇವರ ರಾಜ್ಯವು ಸಾಸಿವೆ ಬೀಜದಂತಿದೆ ಎಂದು ಕರ್ತನಾದ ಯೇಸು ನಮಗೆ ಹೇಳಿದನು - ಅದು ಚಿಕ್ಕದಾದರೂ ನೆಟ್ಟ ಮೇಲೆ ಅದು ಅತ್ಯಂತ ಫಲಪ್ರದವಾಗಿರುತ್ತದೆ.
"......ಅಲ್ಪ ಕಾರ್ಯಗಳ ಆರಂಭದಿನವನ್ನು ಯಾರು ತಿರಸ್ಕರಿಸಲು ಸಾಧ್ಯ? " (ಜೆಕರ್ಯಾ 4:10)
ಒಂದು ಸಾಧಾರಣ ದಯೆಯ ಕ್ರಿಯೆ, ಸೇವೆಗಾಗಿ ಮಧ್ಯಸ್ಥಿಕೆ ಪ್ರಾರ್ಥನೆ ಅಥವಾ ಕರ್ತನ ಕಾರ್ಯದ ಕಡೆಗಿನ ಒಂದು ಸಣ್ಣ ಬೀಜವು ನಿಮ್ಮ ಹುಚ್ಚು ಕಲ್ಪನೆಗೂ ಮೀರಿದ ಸಂಗತಿಯಾಗಿ ಬೆಳೆಯಬಹುದು. ಒಂದೇ ಒಂದು ಪ್ರೋತ್ಸಾಹದಾಯಕ ಮಾತು ಯಾರೊಬ್ಬರ ಇಡೀ ಜೀವನವನ್ನೇ ಬದಲಾಯಿಸಬಹುದು. ನಂಬಿಕೆಯಲ್ಲಿ ಇಡುವ ಒಂದು ಸಣ್ಣ ಹೆಜ್ಜೆ ಅದ್ಭುತ ಫಲಿತಾಂಶಕ್ಕೆ ಕಾರಣವಾಗಬಹುದು.
ಬೀಜಗಳನ್ನು ಬಿತ್ತುವುದು ಮತ್ತು ಅಗತ್ಯಗಳನ್ನು ಪೂರೈಸುವುದು:
ನಮ್ಮ ಜೀವನದ ತೋಟಗಳಲ್ಲಿ, ನಾವು ಬಿತ್ತಬೇಕಾದ ವಿವಿಧ ಬೀಜಗಳಿವೆ - ಪ್ರೀತಿ, ದಯೆ, ಸಂತೋಷ, ಶಾಂತಿ ಮತ್ತು ನಂಬಿಕೆಯೇ ಆ ಬೀಜಗಳು. ಈ ಬೀಜಗಳನ್ನು ಬಿತ್ತಿದಾಗ, ಅವು ನಮ್ಮನ್ನು ಮಾತ್ರವಲ್ಲದೆ ನಮ್ಮ ಸುತ್ತಮುತ್ತಲಿನವರನ್ನು ಸಹ ಆಶೀರ್ವದಿಸುತ್ತವೆ. ಅವು ಎತ್ತರವಾಗಿ ಮತ್ತು ಬಲವಾಗಿ ಬೆಳೆಯುತ್ತವೆ, ಇತರರಿಗೆ ಆಶ್ರಯವನ್ನೂ ಮತ್ತು ನೆರಳನ್ನೂ ಒದಗಿಸುತ್ತವೆ.
"ಒಳ್ಳೇದನ್ನು ಮಾಡುವದರಲ್ಲಿ ಬೇಸರಗೊಳ್ಳದೆ ಇರೋಣ. ಯಾಕಂದರೆ ಮನಗುಂದದಿದ್ದರೆ ತಕ್ಕ ಸಮಯದಲ್ಲಿ ಬೆಳೆಯನ್ನು ಕೊಯ್ಯುವೆವು." (ಗಲಾತ್ಯ 6:9)
ನೆನಪಿಡಿ, ಇದು ಕೇವಲ ಬೀಜಗಳನ್ನು ಬಿತ್ತುವುದರ ಕುರಿತು ಮಾತ್ರವಲ್ಲ; ಅವುಗಳಿಂದ ಏನು ಬೆಳೆಯುತ್ತದೆ ಎಂಬುದರ ಕುರಿತಾಗಿಯೂ ಆಗಿದೆ. ಸಂಪೂರ್ಣವಾಗಿ ಬೆಳೆದ ಮರವು ಕೇವಲ ಸೌಂದರ್ಯಕ್ಕಿಂತ ಹೆಚ್ಚಿನದನ್ನು ನೀಡುತ್ತದೆ - ಇದು ಪಕ್ಷಿಗಳಿಗೆ ಗೂಡನ್ನು, ದಣಿದವರಿಗೆ ನೆರಳನ್ನು ಮತ್ತು ಕೆಲವೊಮ್ಮೆ ಹಸಿದವರಿಗೆ ಹಣ್ಣುಗಳನ್ನೂ ನೀಡುತ್ತದೆ.
"ನೀತಿವಂತರ ಫಲವು ಜೀವವೃಕ್ಷ; ಆತ್ಮಗಳನ್ನು ಗೆಲ್ಲುವವನು ಜ್ಞಾನಿಯಾಗಿದ್ದಾನೆ."(ಜ್ಞಾನೋಕ್ತಿ 11:30)
ದೊಡ್ಡ ಮರವಾಗಿ ಬೆಳೆಯುವ ಸಾಸಿವೆ ಬೀಜದಂತೆ, ನಿಮ್ಮ ಸಣ್ಣ ಕ್ರಿಯೆಗಳು ದೂರಗಾಮಿ ಪರಿಣಾಮಗಳನ್ನು ಬೀರಬಹುದು, ಅಗತ್ಯವಿರುವವರಿಗೆ ಭಾವನಾತ್ಮಕ, ಆತ್ಮೀಕ ಅಥವಾ ದೈಹಿಕ ಆಶ್ರಯವನ್ನು ಒದಗಿಸಬಹುದು.
ಪ್ರಾಯೋಗಿಕ ಹಂತಗಳು:
1. ನಿಮ್ಮಲ್ಲಿರುವ ಬೀಜಗಳನ್ನು ಗುರುತಿಸಿ: ದೇವರು ನಿಮಗೆ ವಹಿಸಿಕೊಟ್ಟಿರುವ ಬೀಜಗಳು ಯಾವುವು? ನಿಮ್ಮ ಸಮಯ, ನಿಮ್ಮ ಪ್ರತಿಭೆ, ನಿಮ್ಮ ಸಂಪನ್ಮೂಲಗಳು ಇತ್ಯಾದಿ?
2. ನಿಮ್ಮ ಉದ್ಯಾನವನ್ನು ಹುಡುಕಿ: ದೇವರು ನಿಮ್ಮನ್ನು ಹೂಡಿಕೆ ಮಾಡಲು ಕರೆಯುತ್ತಿರುವ ಫಲವತ್ತಾದ ನೆಲ ಯಾವುದು? ಮುರಿದ ಸಂಬಂಧ, ಹೆಣಗಾಡುತ್ತಿರುವ ಸಮುದಾಯ, ಚರ್ಚ್ನಲ್ಲಿ ಅರ್ಥಪೂರ್ಣ ಉದ್ದೇಶ?
3. ಶ್ರದ್ಧೆಯಿಂದ ಬಿತ್ತಿ: ಮನಸೋ ಇಚ್ಛೆ ಬೀಜಗಳನ್ನು ಚೆಲ್ಲಬೇಡಿ. ಉದ್ದೇಶಪೂರ್ವಕವಾಗಿರಿ, ಪ್ರಾರ್ಥಿಸಿ ಮತ್ತು ಉದ್ದೇಶಪೂರ್ವಕವಾಗಿ ವರ್ತಿಸಿ.
ಯಾವಾಗಲೂ ನೆನಪಿಡಿ, ದೇವರ ರಾಜ್ಯವು ಕೇವಲ ಭವ್ಯವಾದ ಚಿಹ್ನೆಗಳು ಮತ್ತು ನಾಟಕೀಯ ಕ್ಷಣಗಳ ಮೇಲೆ ನಿರ್ಮಿಸಲ್ಪಟ್ಟಿಲ್ಲ; ಇದು ನಂಬಿಕೆ ಮತ್ತು ಪ್ರೀತಿಯ ದೈನಂದಿನ ಕ್ರಿಯೆಗಳ ಮೇಲೆ ನಿರ್ಮಿಸಲ್ಪಟ್ಟಿದೆ. ಆದ್ದರಿಂದ, ನಿಮ್ಮ ಜೀವನದ ಚೀಲ ಅಥವಾ ಜೇಬಿನಿಂದ ಬೀಜಗಳನ್ನು ಹೊರತೆಗೆದು ನಂಬಿಕೆಯಲ್ಲಿ ಬಿತ್ತಿರಿ, ಏಕೆಂದರೆ "ಸಣ್ಣ ಬೀಜಗಳು ಸಹ ಉನ್ನತ ಅಗತ್ಯಗಳನ್ನು ಪೂರೈಸಬಹುದು." ಒಳ್ಳೆಯದನ್ನು ಮಾಡುವುದರಲ್ಲಿ ಎದೆಗುಂದದಿರೋಣ. ಏಕೆಂದರೆ ನಾವು ಬೇಸರಗೊಳ್ಳದಿದ್ದರೆ ತಕ್ಕ ಸಮಯದಲ್ಲಿ ಬೆಳೆಯನ್ನು ಕೊಯ್ಯುವೆವು." ಎಂದು ದೇವರ ವಾಕ್ಯವು ನಮಗೆ ಸ್ಪಷ್ಟವಾಗಿ ನೆನಪಿಸುತ್ತದೆ.(ಗಲಾತ್ಯ 6:9)
ಒಳ್ಳೆಯ ಉದ್ದೇಶಗಳು ಬೀಜಗಳಂತೆ - ಅವು ಸಾಮರ್ಥ್ಯಗಳಿಂದ ತುಂಬಿರುತ್ತವೆ ಆದರೆ ಕಾರ್ಯರೂಪಕ್ಕೆ ಬರದಿದ್ದರೆ ಅವು ನಿಷ್ಪ್ರಯೋಜಕವಾಗಿಬಿಡುತ್ತವೆ.
Bible Reading: Matthew 15-17
ಪ್ರಾರ್ಥನೆಗಳು
ತಂದೆಯೇ, ನೀವು ನಮಗೆ ನೀಡಿದ ಬೀಜಗಳು ಎಷ್ಟೇ ಚಿಕ್ಕದಾಗಿದ್ದರೂ ಅವುಗಳನ್ನು ಗುರುತಿಸುವ ಶಕ್ತಿಯನ್ನು ನಮಗೆ ಅನುಗ್ರಹಿಸಿ ನಂಬಿಕೆ ಮತ್ತು ಪ್ರೀತಿಯಲ್ಲಿ ನಾವು ಬಿತ್ತಬಹುದಾದ ಫಲವತ್ತಾದ ಭೂಮಿಯ ಕಡೆಗೆ ಸಾಗುವಂತೆ ನಮ್ಮನ್ನು ಮಾರ್ಗದರ್ಶನ ಮಾಡಿ. ನಮ್ಮ ಸಣ್ಣ ಸಣ್ಣ ಕಾರ್ಯಗಳೂ ಸಹ ಆಶ್ರಯವನ್ನೂ ಮತ್ತು ಸಂತೋಷವನ್ನೂ ನೀಡುವ ಎತ್ತರದ ಮರಗಳಾಗಿ ಬೆಳೆದು ಹಬ್ಬಲಿ. ಯೇಸುನಾಮದಲ್ಲಿ ಬೇಡುತ್ತೇವೆ ತಂದೆಯೇ ಆಮೆನ್.
Join our WhatsApp Channel
Most Read
● ದಿನ 23:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ● ದೇವರು ಮುಯ್ಯಿ ತೀರಿಸಲಿ.
● ದೈವಿಕ ಶಾಂತಿಯನ್ನು ಪ್ರವೇಶಿಸುವುದು ಹೇಗೆ
● ಅಂತಿಮ ಸುತ್ತನ್ನೂ ಗೆಲ್ಲುವುದು
● ರಕ್ತದಲ್ಲಿ ಜೀವವಿದೆ
● ಪ್ರವಾದನಾ ವಾಕ್ಯವನ್ನು ಸ್ವೀಕರಿಸಿದ ನಂತರ ಏನು ಮಾಡಬೇಕು?
● ಕರ್ತನು ಹೃದಯವನ್ನೇ ಶೋಧಿಸುವವನಾಗಿದ್ದಾನೆ.
ಅನಿಸಿಕೆಗಳು
