ಅನುದಿನದ ಮನ್ನಾ
2
0
27
ಒಂದು ಜನಾಂಗವನ್ನು ಉಳಿಸಿದ ಕಾಯುವಿಕೆ
Sunday, 16th of February 2025
Categories :
ಎಸ್ತರ್ ರಹಸ್ಯಗಳು: ಸರಣಿ (Secrets of Esther: Series)
"ಅರಸರು ನನ್ನ ಮೇಲೆ ಕಟಾಕ್ಷವಿಟ್ಟು ನಾನು ಕೇಳುವದನ್ನು ಕೊಡುವದಕ್ಕೂ ನನ್ನ ವಿಜ್ಞಾಪನೆಯನ್ನು ನೆರವೇರಿಸುವದಕ್ಕೂ ಮನಸ್ಸುಳ್ಳವರಾಗಿದ್ದರೆ ನಾನು ತಮಗೋಸ್ಕರ ಸಿದ್ಧಮಾಡಿಸುವ ಔತಣಕ್ಕೆ ನಾಳೆಯೂ ಹಾಮಾನನ ಜೊತೆಯಲ್ಲಿ ಬರೋಣವಾಗಲಿ; ಆಗ ಅರಸರು ಹೇಳಿದಂತೆ ಮಾಡುವೆನು. ಇದೇ ನನ್ನ ಮನವಿ ಎಂದು ಉತ್ತರಕೊಟ್ಟಳು." (ಎಸ್ತರ್ 5:7-8)
ಈಗಾಗಲೇ ಮೂರು ದಿನಗಳ ಕಾಲ ಉಪವಾಸ ಮಾಡಿ ಪ್ರಾರ್ಥಿಸಿದ ನಂತರ, ಹಾಮಾನನ ಆಜ್ಞೆಯಿಂದ ಯೆಹೂದ್ಯರನ್ನು ರಕ್ಷಿಸಲು ತನ್ನ ಮನವಿಯ ಬಗ್ಗೆ ರಾಜನೊಂದಿಗೆ ಮಾತನಾಡಲು ಎಸ್ತರಳಿಗೆ ಅವಕಾಶವನ್ನು ನೀಡಲಾಯಿತು. ಆಗ ತಕ್ಷಣವೇ ತನ್ನ ಮನವಿಯನ್ನು ಪ್ರಸ್ತುತಪಡಿಸುವ ಬದಲು, ಅವಳು ರಾಜ ಮತ್ತು ಹಾಮಾನನನ್ನು ಔತಣಕ್ಕೆ ಆಹ್ವಾನಿಸಿದಳು. ತನ್ನ ಮನವಿಯನ್ನು ಪ್ರಸ್ತುತಪಡಿಸಲು ಈಗ ಅವಳು ಆ ಅವಕಾಶವನ್ನು ಬಳಸಿಕೊಳ್ಳಬಹುದೇನೋ ಎಂದು ಒಬ್ಬರು ನಿರೀಕ್ಷಿಸಬಹುದು, ಆದರೆ ಎಸ್ತರಳು ಇನ್ನೂ ಒಂದು ರಾತ್ರಿ ಕಾಯಲು ನಿರ್ಧರಿಸಿದಳು. ಮರುದಿನ ರಾತ್ರಿಯ ಭೋಜನ ಸಮಯದಲ್ಲಿ ತನ್ನ ಮನವಿಯನ್ನು ಸಲ್ಲಿಸಲು ಅವಳು ನಿರ್ಧರಿಸಿದಳು. ಹೆಚ್ಚುವರಿಯಾಗಿ ಒಂದು ದಿನವನ್ನು ಕಾಯುವ ಮೂಲಕ, ಎಸ್ತರಳು ತನ್ನ ಪರವಾಗಿ ದೇವರು ಮಧ್ಯಪ್ರವೇಶಿಸಲು ಸಮಯವನ್ನು ಅನುಮತಿಸಿದಳು.
ನೀವು ಎಸ್ತರಳು 6:1 ಅನ್ನು ಓದಿ ನೋಡಿದರೆ, ದೇವರ ಪರಿಪೂರ್ಣ ಸಮಯದ ಮೂಲಕ ನಿರ್ದಿಷ್ಟವಾಗಿ ಅಂದಿನ ರಾತ್ರಿಯಲಲ್ಲಿಯೇ ರಾಜನಿಗೆ ನಿದ್ರೆ ಮಾಡಲು ಸಾಧ್ಯವಾಗಲಿಲ್ಲ ಎಂಬುದನ್ನು ನೀವು ನೋಡುತ್ತೀರಿ. ಆತನಿಗೆ ನಿದ್ದೆ ಬರುವಂತೆ ಮಾಡಬಹುದೆಂಬ ನಿರೀಕ್ಷೆಯಲ್ಲಿ ಪೂರ್ವಕಾಲ ವೃತ್ತಾಂತದ ಸುರಳಿಗಳನ್ನು ಓದಲಿಕ್ಕಾಗಿ ಅವನ ಬಳಿಗೆ ತರಲಾಯಿತು. ಎಸ್ತರಳು ಹಿಂದಿನ ದಿನವೇ ತನ್ನ ಮನವಿಯನ್ನು ಸಲ್ಲಿಸಿದ್ದರೆ, ಅರಸನು ತನ್ನ ಹತ್ಯೆಯ ಸಂಚನ್ನು ಬಹಿರಂಗಪಡಿಸುವಲ್ಲಿ ಮೊರ್ದೆಕೈಯ ಪಾತ್ರವೇನಾಗಿತ್ತು ಎನ್ನುವ ಕುರಿತು ಅರಸನು ಓದುವ ಅವಕಾಶವನ್ನು ಅವಳು ಕಳೆದುಕೊಳ್ಳುತ್ತಿದ್ದಳು.
ನಾವು ಇಂದು ಜೆಟ್ ಯುಗದಲ್ಲಿದ್ದೇವೆ, ಇಲ್ಲಿ ವೇಗವೇ ಮೂಲಭೂತವಾಗಿದೆ. ಇಂದು ಯಾರೂ ಕೂಡ ಕಾಯಲು ಬಯಸುವುದಿಲ್ಲ. ಕಾಯುವುದು ಎಂದರೆ ವ್ಯರ್ಥವಾದಂತೆ ಎಂದು ಭಾವಿಸುತ್ತೇವೆ. ನಾವು ತ್ವರಿತವಾಗಿ ತೃಪ್ತಿಹೊಂದುವ ಸಂಸ್ಕೃತಿಯಲ್ಲಿ ವಾಸಿಸುತ್ತಿದ್ದೇವೆ. ನಮಗೆ ಈಗ ಅದು ಬೇಕು ಎಂದರೆ ಅದು ಬೇಕು ಅಷ್ಟೇ. ಅದು ಸಿಗದಿದ್ದರೆ, ನಾವು ನಿರಾಶೆಗೊಳ್ಳುತ್ತೇವೆ. ಕೆಲವರು ತಮಗೆ ಬೇಕಾದುದನ್ನು ಪಡೆಯಲು ಕೊಲ್ಲುವಷ್ಟು ಮುಂದು ವರೆಯುತ್ತಾರೆ. ಇತರರು ಭೌತಿಕ ವಸ್ತುಗಳನ್ನು ಪಡೆದು ಕೊಳ್ಳಲು ಕಾಯುವ ಬದಲು ತಮ್ಮ ಆತ್ಮವನ್ನೇ ಮಾರಿ ಕೊಳ್ಳುತ್ತಾರೆ. ಕೆಲವು ಯುವಕರು ತಾವು ಗಣ್ಯರು ಎಂದು ಇತರರು ತಮ್ಮ ಕುರಿತು ಭಾವಿಸಬೇಕೆಂದು ಚಿಕ್ಕ ವಯಸ್ಸಿನಲ್ಲಿಯೇ ಲೇಟೆಸ್ಟ್ ಕಾರನ್ನು ಓಡಿಸಲು ಬಯಸುತ್ತಾರೆ. ಬೆಳವಣಿಗೆಯ ಪರಿಕಲ್ಪನೆಯನ್ನೇ ಇಂದು ಕಸದ ಬುಟ್ಟಿಗೆ ಹಾಕಿ ಬಿಡಲಾಗಿದೆ. ನಮಗೆ ಈಗ ಸದ್ಯಕ್ಕೆ ಬೇಕಾಗಿರುವುದು ನಮ್ಮ ಗುರಿಯನ್ನು ತಲುಪಲು ಪ್ರಕ್ರಿಯೆಯ ಹೆಜ್ಜೆಗಳನ್ನು ಹಾರುವಂತದ್ದು ಎನ್ನುವಂತಾದ್ದಾಗಿಬಿಟ್ಟಿದೆ.
ವಾಸ್ತವವಾಗಿ, ದೇವರೊಂದಿಗೆ ಬೇಕಾಗಿರುವ ಅನ್ಯೋನ್ಯತೆಗೆ ಇದಕ್ಕಿಂತ ದೊಡ್ಡ ಶತ್ರುವಿಲ್ಲ. ಯಾರಾದರೂ ಅಥವಾ ಏನಾದರೂ ನಿಜವಾಗಿಯೂ ನಮಗೆ ಮುಖ್ಯವಾಗಿದ್ದರೆ, ಅದಕ್ಕಾಗಿ ಕಾಯುವುದು ಯೋಗ್ಯವಾಗಿದೆ. ನಾವು ನಮಗೆ ಬೆಲೆವುಳ್ಳದ್ದು ಎನಿಸಿದರೆ ಮಾತ್ರವೇ ನಾವು ಅದಕ್ಕಾಗಿ ಕಾಯುತ್ತೇವೆ. ಕಾಯುವುದೇ ಆರಾಧನೆಯಾಗಿದೆ. ನೀವು ಪುರಾತನ ರಾಜನ (ಅಥವಾ ಆಧುನಿಕ ನಾಯಕನ, ನಿರ್ದಿಷ್ಟ ವಿಷಯಕ್ಕಾಗಿ) ನಿಬಂಧನೆಯನ್ನು ನಿರ್ಲಕ್ಷ ಮಾಡಿದರೆ, ನಿಮ್ಮ ಪ್ರವೇಶವನ್ನು ನಿರಾಕರಿಸಲಾಗುತ್ತದೆ ಮತ್ತು ವಿಪರೀತ ಸಂದರ್ಭಗಳಲ್ಲಿ, ಸಿಂಹಾಸನವನ್ನು ಅತಿಕ್ರಮಿಸಿದಕ್ಕಾಗಿ ನೀವು ಮರಣದಂಡನೆಯನ್ನೂ ಸಹ ವಿಧಿಸಬಹುದು.
" ಯೆಹೋವನನ್ನು ನಿರೀಕ್ಷಿಸುವವರೋ ಹೊಸ ಬಲವನ್ನು ಹೊಂದುವರು; ಹದ್ದುಗಳಂತೆ ರೆಕ್ಕೆಗಳನ್ನು ಚಾಚಿಕೊಂಡು [ಏರುವರು]; ಓಡಿ ದಣಿಯರು, ನಡೆದು ಬಳಲರು."(ಯೆಶಾಯ 40:31)
ಒಬ್ಬ ಜ್ಞಾನಿಯು ಒಮ್ಮೆ ಹೀಗೆ ಹೇಳಿದ್ದಾರೆ, "ನೀವು ಮೇಲಕ್ಕೆ ಹಾರಿದಾಗ ನೀವು ಕೆಳಗೆ ಬರುತ್ತೀರಿ, ಆದರೆ ನೀವು ಬೆಳೆದಾಗ ನೀವು ಎತ್ತರದಲ್ಲೇ ಇರುತ್ತೀರಿ. ಆದ್ದರಿಂದ ನಾವು ಬೆಳವಣಿಗೆಯ ಸಂಸ್ಕೃತಿಯನ್ನು ಕಲಿಯಬೇಕು ಮತ್ತು ಕಾಯುವ ಗುಣವನ್ನು ಮೈಗೂಡಿಸಿಕೊಳ್ಳಬೇಕು. ಜೀವನದಲ್ಲಿ ಹದ್ದಿನಂತೆ ಎತ್ತರಕ್ಕೆ ಏರಲು ಕಾಯುವುದೇ ಕೀಲಿಕೈ ಯಾಗಿದೆ."
ಆ ವಾಕ್ಯವು ಹದ್ದಿನ ಜೀವನಶೈಲಿಯನ್ನು ವಿವರಿಸುತ್ತದೆ. ಹದ್ದು ಇತರ ಪಕ್ಷಿಗಳಂತೆ ಹಾರುವುದಿಲ್ಲ; ಅದು ಮೇಲೇ ತೇಲುತ್ತದೆ. ಅಂದರೆ ಅದು ಅಸಾಧ್ಯವಾದ ಎತ್ತರದಲ್ಲಿ ತನ್ನ ರೆಕ್ಕೆಗಳನ್ನು ಚಾಚುತ್ತದೆ. ಬಿರುಗಾಳಿ ಬೀಸುವಾಗ ಅದು ಅತ್ಯುತ್ತಮವಾಗಿ ಮೇಲೇರಿ ನಂತರ ಚಂಡಮಾರುತದ ಅಲೆಗಳ ಮೇಲೆ ಸವಾರಿಯನ್ನು ಆನಂದಿಸಿತ್ತಾ ತನ್ನ ರೆಕ್ಕೆಗಳನ್ನು ಸಂಪೂರ್ಣವಾಗಿ ಹರಡುತ್ತದೆ. ಆದರೆ, ಈ ಅದ್ಭುತ ಸಾಧನೆಯನ್ನು ಸಾಧಿಸಲು, ಅದು ಕಾಯಬೇಕಾಗಿದೆ. ಹದ್ದು ಬಿರುಗಾಳಿಯನ್ನು ಸೃಷ್ಟಿಸಲಾರದು; ಚಂಡಮಾರುತ ಉಂಟಾಗುವಷ್ಟು ಸಮಯವೂ ಅದು ಪರ್ವತಗಳಲ್ಲಿ ಕಾಯಬೇಕಾಗುತ್ತದೆ. ಇದು ನಮ್ಮ ಜೀವನಶೈಲಿಯೂ ಆಗಬೇಕು. ನಮಗೆ ಉತ್ತಮವಾದವುಗಳು ಖಂಡಿತವಾಗಿಯೂ ಸಂಭವಿಸುತ್ತದೆ. ನಾವು ಈಗ ಎಲ್ಲಿದ್ದೇವೆ ಎಂಬುದೇ ನಮ್ಮ ಅಂತ್ಯವಲ್ಲ, ಅದು ಕೇವಲ ತಿರುವಷ್ಟೇ . ಯೆರೆಮಿಯಾ 29:11 ರಲ್ಲಿ ದೇವರು "ಇವರಿಗೆ ಗತಿಯಾಗಲಿ, ನಿರೀಕ್ಷೆಯಿರಲಿ ಎಂದು ನಾನು ನಿಮ್ಮ ವಿಷಯದಲ್ಲಿ ಮಾಡಿಕೊಳ್ಳುತ್ತಿರುವ ಆಲೋಚನೆಗಳನ್ನು ನಾನೇ ಬಲ್ಲೆನು; ಅವು ಅಹಿತದ ಯೋಚನೆಗಳಲ್ಲ, ಹಿತದ ಯೋಚನೆಗಳೇ ." ಎಂದು ಹೇಳುತ್ತಾನೆ . ನೀವು ಕಾಯುತ್ತಿರುವಾಗ ಮಾತ್ರವೇ ಆತನ ಯೋಜನೆಗಳು ಕಾರ್ಯರೂಪಕ್ಕೆ ಬರುತ್ತವೆ. ಸರಿಯಾದ ಸಮಯದವರೆಗೆ ಬೇಗನೆ ತೃಪ್ತಿಯಾಗಬೇಕು ಎನ್ನುವ ಮನೋಭಾವವನ್ನು ಮುಂದೂಡಲು ಕಲಿಯಿರಿ.
ಕೆಲವರು ಬೇಗನೇ ಉನ್ನತಿಗೆ ಬಂದು ನಂತರ ತಮ್ಮ ಮಹಿಮೆಯನ್ನು ಕಳೆದುಕೊಂಡಿದ್ದಾರೆ. ಅದರಲ್ಲಿ ಕೆಲವರು ಬದುಕಿದ್ದಾರೆ ಮತ್ತೂ ಕೆಲವರು ಮರೆಯಲ್ಪಟ್ಟಿದ್ದಾರೆ . ಆದರೆ ನೀವು ಸರಿಯಾದ ಕ್ಷಣಕ್ಕಾಗಿ ಕಾಯುತ್ತಿರುವಾಗ, ಆ ಮಹಿಮೆ ಹಾಗೆ ಉಳಿಯುತ್ತದೆ. ನಾವು ಕ್ರಮವಾದ ದೇವರನ್ನು ಸೇವಿಸುವವರಾಗಿದ್ದೇವೆ. "ಬಳಿಕ ಆತನು ಅವರ ಜೊತೆಯಲ್ಲಿ ನಜರೇತಿಗೆ ಬಂದು ಅವರಿಗೆ ಅಧೀನನಾಗಿದ್ದನು. ಆತನ ತಾಯಿಯು ಈ ಸಂಗತಿಗಳನ್ನೆಲ್ಲಾ ತನ್ನ ಮನಸ್ಸಿನಲ್ಲಿ ಇಟ್ಟುಕೊಂಡಳು." ಎಂದು ಲೂಕ 2:51 ರಲ್ಲಿ
ಯೇಸುವಿನ ಕುರಿತು ಸತ್ಯವೇದ ಮಾತನಾಡುತ್ತದೆ. ಆತನು ದೇವಾಲಯದಲ್ಲಿ ಫರಿಸಾಯರು ಮತ್ತು ಶಾಸ್ತ್ರಿಗಳೊಂದಿಗೆ ಸಂವಾದಾತ್ಮಕವಾಗಿ ಚರ್ಚಿಸುತ್ತಿದ್ದು ಆತನೇ ಇಸ್ರಾಯೆಲ್ಯರನ್ನು ಬಿಡಿಸಲು ಬಂದ ಲೋಕರಕ್ಷಕ ಎಂದು ಘೋಷಿಸಲು ಇದು ಒಂದು ಪರಿಪೂರ್ಣ ಅವಕಾಶದಂತೆ ತೋರುತ್ತದೆ. ಆದರೆ ಅದು ಹಾಗಾಗಲಿಲ್ಲ. ಏಕೆಂದರೆ ಅದಕ್ಕಾಗಿ ಸಮಯ ಇನ್ನೂ ಪಕ್ವವಾಗಿರಲಿಲ್ಲ. ಆತನು ಇನ್ನೂ ಹನ್ನೆರಡು ವರ್ಷ ವಯಸ್ಸಿನವನಾಗಿದ್ದು ಆತನ ತಂದೆ ತಾಯಿಯರಿಗೆ ವಿಧೇಯನಾಗಿ ಅವರಿಗೆ ಅಧೀನರಾಗಿರಬೇಕಾದ ಸಮಯ ಅದಾಗಿತ್ತು.
ಹಾಗಾಗಿ ಕಾಯಿರಿ. ಯಾವುದನ್ನೋ ಹೊಂದಿ ಕೊಳ್ಳುವುದಕ್ಕಾಗಿ ನೀವು ಕದಿಯುವ ಅಗತ್ಯವಿಲ್ಲ. ದೇವರೇ ಅದನ್ನು ನಿಮಗೆ ನೀಡಬಹುದು. ಆದರೆ ಆತನ ಸಮಯಕ್ಕಾಗಿ ಕಾಯುವಷ್ಟು ನೀವು ಆತನನ್ನು ನಂಬಬೇಕು.
Bible Reading: Numbers 7
ಪ್ರಾರ್ಥನೆಗಳು
ತಂದೆಯೇ, ನೀವು ನನ್ನ ಹೃದಯವನ್ನು ತಾಳ್ಮೆಯ ಸದ್ಗುಣದಿಂದ ತುಂಬಿಸಬೇಕೆಂದು ಯೇಸುನಾಮದಲ್ಲಿ ಪ್ರಾರ್ಥಿಸುತ್ತೇನೆ. ನಾನು ಕಾಯುವಿಕೆಯ ಪ್ರಕ್ರಿಯೆಗೆ ಒಳಪಡಲು ಹತಾಶೆಗೊಳಪಡಬಾರದು ಎಂದು ಯೇಸುನಾಮದಲ್ಲಿ ಪ್ರಾರ್ಥಿಸುತ್ತೇನೆ. ಬದಲಾಗಿ, ಜೀವನದಲ್ಲಿ ನನಗಾಗಿ ನೀನು ನಿಗದಿಪಡಿಸಿದ ಸಮಯಕ್ಕಾಗಿ ನಾನು ಕಾಯುವಂತೆ ನನಗೆ ಸಹಾಯ ಮಾಡಿ. ನನ್ನ ಹೃದಯವು ತಾಳ್ಮೆಯ ಮನೋಭಾವದಿಂದ ತುಂಬಿದೆ ಎಂದು ನಾನು ಯೇಸು ನಾಮದಲ್ಲಿ ಘೋಷಿಸುತ್ತೇನೆ. ಆಮೆನ್.
Join our WhatsApp Channel

Most Read
● ಇತರರೊಂದಿಗೆ ಸಮಾಧಾನದಿಂದ ಜೀವಿಸಿರಿ● ಸರಿಯಾದವುಗಳನ್ನು ಶೋಧಿಸಿ ಅವುಗಳನ್ನೇ ಹಿಬಾಲಿಸುವುದು.
● ದೇವದೂತರ ಸಹಾಯವನ್ನು ಸಕ್ರಿಯಗೊಳಿಸುವುದು ಹೇಗೆ
● ಆತನಿಗೆ ಯಾವುದೇ ಮಿತಿಯಿಲ್ಲ.
● ಅಧರ್ಮಗಳ ಆಳ್ವಿಕೆಯ ಬಲವನ್ನು ಮುರಿಯುವುದು - I
● ಕೃಪೆಯಿಂದಲೇ ರಕ್ಷಣೆ
● ದೇವರು ಹೇಗೆ ಒದಗಿಸುತ್ತಾನೆ #3
ಅನಿಸಿಕೆಗಳು